Kannada Essay on Sardar Vallabhbhai Patel – ವಲ್ಲಭಬಾಯಿ ಪಟೇಲ

    Kannada Essay on Sardar Vallabhbhai Patel

    ರಾಷ್ಟ್ರನಾಯಕ ವಲ್ಲಭಬಾಯಿ ಪಟೇಲರನ್ನು ಕವಯತ್ರಿ ಸರೋಜಿನಿ ನಾಯ್ಡು ‘ಹಿಮಮುಚ್ಚಿದ ಜ್ವಾಲಾಮುಖಿ’ ಎಂದು ಬಣ್ಣಿಸಿದ್ದಾರೆ. ವಲ್ಲಭಬಾಯಿ ಪಟೇಲರು 1875 ಅಕ್ಟೋಬರ್ 31 ರಂದು ಗುಜರಾತ್ ಪ್ರಾಂತ್ಯದ ಖೇಡಾ ಜಿಲ್ಲೆ ನಡಿಯಾದ್ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ಝವೇರಾಬಾಯಿ. ಇವರಿಗೆ ಐದು ಮಕ್ಕಳು, ವಿಠಲಬಾಯಿ ಮೂರನೆಯವರು, ವಲ್ಲಭಬಾಯಿ ನಾಲ್ಕನೆಯವರು. ತಂದೆ ರೈತರು, ರೈತರ ಕಷ್ಟ, ನೋವು ಎಳೆಯ ವಯಸ್ಸಿನಲ್ಲಿಯೇ ವಲ್ಲಭಭಾಯಿ ಪಟೇಲರಿಗೆ ಅರಿವಾಯಿತು.

    ಪ್ರಾರಂಭದ ಶಿಕ್ಷಣ ಬಡೋದೆಯಲ್ಲಿ ಇಂಗ್ಲೆಂಡಿನಲ್ಲಿ ಬ್ಯಾರಿಸ್ಟರ್ ಪದವಿ ಪಡೆದು ಭಾರತಕ್ಕೆ ಮರಳಿದರು. ವಕೀಲ ವೃತ್ತಿ ಕೈಗೊಂಡು ಬಹುಬೇಗನೆ ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾದರು. ಇದೇ ವೇಳೆಯಲ್ಲಿ ಇವರ ಮೇಲೆ ಬಾಲಗಂಗಾಧರ ತಿಲಕರ ಪ್ರಭಾವ ಅಚೊತ್ತಿತ್ತು. ಮುಂದಿನ ದಿನಗಳಲ್ಲಿ ವಲ್ಲಭಬಾಯಿ ಪಟೇಲರು ಗಾಂಧೀಜಿಯ ಪ್ರಭಾವ ವಲಯಕ್ಕೆ ಬಂದರು.

    ಗಾಂಧೀಜಿ ನೇತೃತ್ವದಲ್ಲಿ ನಡೆದ ಅಹಮದಾಬಾದಿನ ಗಿರಣಿ ಕಾರ್ಮಿಕರ ಚಳವಳಿ ಮತ್ತು ಖೇಡಾದ ರೈತರ ಚಳವಳಿ ಹಾಗೂ ಅಸಹಕಾರ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. 1936ರಲ್ಲಿ ಗುಜರಾತಿನಲ್ಲಿಯ ಭೀಕರ ಪ್ರವಾಹ, 1935ರಲ್ಲಿ ಬಿಹಾರದಲ್ಲಿ ಸಂಭವಿಸಿದ ಸಂಕಟ ಸಮಯದಲ್ಲಿ ವಲ್ಲಭಭಾಯಿ ಪಟೇಲರು ಗಾಂಧೀಜಿ ಜೊತೆ ಸೇರಿ ಜನಸೇವೆಗೆ ಕಂಕಣಬದ್ಧರಾಗಿ ನಿಂತರು. ಮುಖ್ಯ ಸೇನಾನಿಯಾಗಿ ನೊಂದವರ ಜೊತೆ ಸ್ಪಂದಿಸಿದರು. ಮುಂದೆ 1928ರ ಬಾರ್ದೂಲಿ ಸತ್ಯಾಗ್ರಹದಿಂದ ಅವರಿಗೆ ಅಖಿಲ ಭಾರತ ಪ್ರಸಿದ್ದಿ ಲಭಿಸಿತು. ಎಂಬತ್ತು ಸಾವಿರ ರೈತ ಹೋರಾಟಗಾರರ ಮುಖಂಡತ್ವವನ್ನು ವಹಿಸಿದರು. ಆಗಲೇ ಇವರಿಗೆ “ಸರದಾರ” ಎಂಬ ಬಿರುದು ಬಂದಿತು. ಗುಜರಾತ್ ಪ್ರಾಂತ್ಯದ ವಲ್ಲಭಬಾಯಿ ಭಾರತದ ಸರದಾರರಾದರು.

    1932ರಲ್ಲಿ ಅವರು ಗಾಂಧೀಜಿ ಜೊತೆ 16 ತಿಂಗಳು ಯರವಾಡ ಸೆರೆಮನೆಯಲ್ಲಿ ಖೈದಿಯಾಗಿದ್ದರು. ಇದೇ ಸಮಯದಲ್ಲಿ ಅವರು ಚಹಾ ಮತ್ತು ಧೂಮಪಾನವನ್ನು ತ್ಯಜಿಸಿದರು. 1931ರಲ್ಲಿ ಕರಾಚಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾದರು. ಕಾಂಗ್ರೆಸನ್ನು ಬಲಪಡಿಸಿದರು. ಸ್ವಾತಂತ್ರ್ಯಾನಂತರ ಸಂಸ್ಥಾನಗಳ ಪ್ರಶ್ನೆ ರಾಷ್ಟ್ರದ ಪ್ರಮುಖ ವಿಷಯವಾಗಿತ್ತು. ಭಾರತದ ಪ್ರಥಮ ಗೃಹಮಂತ್ರಿಯಾಗಿದ್ದ ಸರದಾರರು ಸಂಸ್ಥಾನಗಳ ಸೇರ್ಪಡೆಗೆ ಬಹಳಷ್ಟು ಶ್ರಮಿಸಿದರು. ಸುಮಾರು 500ಕ್ಕೂ ಹೆಚ್ಚು ಸಂಸ್ಥಾನಗಳ ಭವಿಷ್ಯವನ್ನು ಅಲ್ಪ ಅವಧಿಯಲ್ಲಿಯೇ ನಿರ್ಧರಿಸಿದರು. ಹೈದರಾಬಾದನ್ನು ಬಲಪ್ರಯೋಗದಿಂದ ಹತೋಟಿಗೆ ಒಳಪಡಿಸಿದರು. ಇತರ ಸಂಸ್ಥಾನಗಳನ್ನು ಸೌಹಾರ್ದ ಚರ್ಚೆಯ ಮೂಲಕ ವಿಲೀನಗೊಳಿಸಿದರು. ಈ ಕೆಲಸದಲ್ಲಿ ಅವರು ತೋರಿದ ಧೈರ್ಯ, ಕುಶಲತೆಯನ್ನು ಕಂಡು ದೇಶ ಬೆರಗಾಯಿತು. ಇವರನ್ನು ಭಾರತದ ‘ಬಿಸ್ಮಾರ್ಕ್’ ಎಂದು ಬಣ್ಣಿಸಲಾಯಿತು. ಉಕ್ಕಿನ ಮನುಷ್ಯ’ ಎಂದು ಭಾರತೀಯರು ಕೊಂಡಾಡಿದರು.

    ಸರದಾರರು ನಿಷ್ಟುರ ವ್ಯಕ್ತಿ. ಆದರೆ ಅವರ ಮಾನವೀಯ ಅಂತಃಕರಣ, ದೂರದೃಷ್ಟಿ, ಹಾಸ್ಯಪ್ರವೃತ್ತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ದೇಶಸೇವೆಗಾಗಿ ಅರ್ಧ ಶತಮಾನದ ಕಾಲ ತಮ್ಮ ಜೀವನವನ್ನು ಮುಡುಪಾಗಿಟ್ಟ ಸರದಾರರು 1950 ಡಿಸೆಂಬರ್ 15ರಂದು ನಿಧನರಾದರು.

    Leave a Reply

    Your email address will not be published. Required fields are marked *